ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 19 DECEMBER 2020
ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿರುವ ಪಕ್ಷೇತರ ಅಭ್ಯರ್ಥಿಯೊಬ್ಬರ ತೋಟದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಅಡಕೆ ಗಿಡಗಳನ್ನು ಕಿತ್ತೊಗೆದಿದ್ದಾರೆ. ಈ ಘಟನೆ ತೀರ್ಥಹಳ್ಳಿಯಲ್ಲಿ ರಾಜಕೀಯ ಕೆಸರೆರಚಾಟಕ್ಕೆ ವೇದಿಕೆಯಾಗಿದೆ. ರೈತನ ಪರವಾಗಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ. ಅಲ್ಲದೆ, ಶಾಸಕ ಆರಗ ಜ್ಞಾನೇಂದ್ರ ಅವರ ಕುಮ್ಮಕ್ಕು ಇದಕ್ಕೆಲ್ಲ ಕಾರಣ ಎಂದು ಆರೋಪಿಸಿದ್ದಾರೆ.
ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ
ಏನಿದು ಘಟನೆ?
ತೀರ್ಥಹಳ್ಳಿಯ ಆರಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೀಸು ಗ್ರಾಮದ ರೈತ ರಂಜನ್ ಎಂಬುವವರು ಬಗರ್ ಹುಕುಂ ಜಮೀನಿನಲ್ಲಿ ನೆಟ್ಟಿದ್ದ ಅಡಕೆ ಗಿಡಗಳನ್ನು ಅರಣ್ಯ ಇಲಾಖೆ ಇವತ್ತು ಕಿತ್ತು ಹಾಕಿದೆ. ಬಿಜೆಪಿ ಮುಖಂಡರ ಒತ್ತಡಕ್ಕೆ ಮಣಿದು ಅರಣ್ಯ ಇಲಾಖೆ ಈ ಕ್ರಮ ಕೈಗೊಂಡಿದೆ ಎಂದು ಕಿಮ್ಮನೆ ರತ್ನಾಕರ್ ಆರೋಪಿಸಿದ್ದಾರೆ.
ನಾಮಪತ್ರ ಹಿಂಪಡೆಯುವಂತೆ ಒತ್ತಡ
ಬೀಸು ಗ್ರಾಮದ ಸುಪ್ರಿತಾ ರಂಜನ್ ಅವರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ನಾಮಪತ್ರ ಹಿಂಪಡೆಯುವಂತೆ ಬಿಜೆಪಿಯವರು ಒತ್ತಡ ಹೇರಿದ್ದರು. ಇದಾಗದಿದ್ದಾಗ ಶಾಸಕರ ಒತ್ತಡಕ್ಕೆ ಮಣಿದು ಅರಣ್ಯ ಅಧಿಕಾರಿಗಳು ಸಾವಿರಾರು ಗಿಡಗಳನ್ನು ಕಿತ್ತೊಗೆದಿದ್ದಾರೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆರೋಪಿಸಿದರು.
ಮೆರವಣಿಗೆ, ಅಹೋ ರಾತ್ರಿ ಧರಣಿ
ರೈತರೊಬ್ಬರು ನೆಟ್ಟಿದ್ದ ಅಡಕೆ ಗಿಡಗಳನ್ನು ರಾಜಕೀಯ ಪ್ರೇರಿತವಾಗಿ ಕಡಿಸಿದ್ದನ್ನು ವಿರೋಧಿಸಿ, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರ ನೇತೃತ್ವದಲ್ಲಿ ದಿಢೀರ್ ಪ್ರತಿಭಟನೆ ನಡೆಸಲಾಯಿತು. ಪಟ್ಟಣದಲ್ಲಿ ಮೆರವಣಿಗೆ ನಡೆಸಲಾಯಿತು. ಅಲ್ಲದೆ ಅರಣ್ಯ ಇಲಾಖೆ ಕಚೇರಿ ಮುಂದೆ ಅಹೋರಾತ್ರಿ ಧರಣಿ ಅರಂಭಿಸಲಾಗಿದೆ.
ಶಾಸಕರು ಏನಂತಾರೆ?
ಅಡಕೆ ಗಿಡಗಳನ್ನು ಕಿತ್ತು ಹಾಕಿರುವ ಘಟನೆ ಸಂಬಂಧ ಶಾಸಕ ಆರಗ ಜ್ಞಾನೇಂದ್ರ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಬೀಸು ಗ್ರಾಮದಲ್ಲಿ ಅಡಕೆ ಗಿಡಗಳನ್ನು ಕಿತ್ತು ಹಾಕಿದ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಅಮಾನತು ಮಾಡಬೇಕು ಎಂದು ಅರಣ್ಯ ಸಚಿವರೊಂದಿಗೆ ಮಾತನಾಡಿದ್ದೇನೆ. ನಾವು ರೈತ ಪರ ಇದ್ದೇವೆ. ಯಾವ ರೈತನಿಗೆ ಅನ್ಯಾಯವಾದರೂ ಅದನ್ನು ವಿರೋಧಿಸುತ್ತೇವೆ ಎಂದರು.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]