ಶಿವಮೊಗ್ಗದ ಲೈವ್.ಕಾಂ | SHIMOGA NEWS | 8 ಫೆಬ್ರವರಿ 2022
ಹಿಜಾಬ್, ಕೇಸರಿ ಶಾಲು ಸಂಘರ್ಷದ ನಡುವೆ ವಿದ್ಯಾರ್ಥಿಯೊಬ್ಬ ಕೇಸರಿ ಧ್ವಜ ಹಾರಿಸಿದ ವಿಡಿಯೋ ವೈರಲ್ ಆಗಿದೆ. ಇದರಿಂದ ವಿವಾದದ ನಡುವೆ ವಿವಾದ ಶುರುವಾಗಿದೆ.
ಬಾಪೂಜಿನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇವತ್ತು ಹಿಜಾಬ್, ಕೇಸರಿ ಶಾಲು ಸಂಘರ್ಷ ಶುರುವಾಗಿತ್ತು. ವಿದ್ಯಾರ್ಥಿಗಳ ಒಂದು ಗುಂಪು ಕೇಸರಿ ಶಾಲು ಧರಿಸಿ ಹೋರಾಟ ಮಾಡುತ್ತಿದ್ದರು. ಮತ್ತೊಂದು ಗುಂಪು ಹಿಜಾಬ್ ಪರವಾಗಿ ಘೋಷಣೆ ಕೂಗುತ್ತಿತ್ತು.
ಧ್ವಜ ಕಂಬ ಏರಿದ ವಿದ್ಯಾರ್ಥಿ
ಘೋಷಣೆಗಳ ನಡುವೆ ವಿದ್ಯಾರ್ಥಿಯೊಬ್ಬ ಕಾಲೇಜು ಮುಂಭಾಗ ಧ್ವಜ ಸ್ತಂಭ ಹತ್ತಿದ್ದಾನೆ. ಕೇಸರಿ ಧ್ವಜನ್ನು ಹಾರಿಸಿದ್ದಾನೆ. ಆದರೆ ಪೊಲೀಸರು ಕೇಸರಿ ಧ್ವಜ ತೆರವು ಮಾಡುವಂತೆ ವಿದ್ಯಾರ್ಥಿಗೆ ಸೂಚಿಸಿದರು. ಅದರಂತೆ ಆತ ಕೇಸರಿ ಧ್ವಜವನ್ನು ತೆರವು ಮಾಡಿದ್ದಾನೆ.
ವೈರಲ್ ಆಯ್ತು ವಿಡಿಯೋ
ರಾಷ್ಟ್ರ ಧ್ವಜಾರೋಹಣಕ್ಕೆ ಮೀಸಲಾದ ಧ್ವಜ ಸ್ತಂಭದಲ್ಲಿ ಕೇಸರಿ ಧ್ವಜ ಹಾರಿಸಿದ್ದನ್ನು ಹಲವರು ತಮ್ಮ ಮೊಬೈಲ್’ಗಳಲ್ಲಿ ಸೆರೆ ಹಿಡಿದಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಕುರಿತು ಪರ, ವಿರೋಧ ಚರ್ಚೆಗಳು ನಡೆಯುತ್ತಿವೆ.
ಮಾಧ್ಯಮಗಳಲ್ಲಿ ತಪ್ಪು ಮಾಹಿತಿ
ಇತ್ತ ಈ ಬೆಳವಣಿಗೆ ಕುರಿತು ಕೆಲವು ಟಿವಿ ವಾಹಿನಿಗಳಲ್ಲಿ ತಪ್ಪು ಮಾಹಿತಿ ಪ್ರಕಟವಾಗಿದೆ. ತ್ರಿವರ್ಣ ಧ್ವಜವನ್ನು ತೆರವು ಮಾಡಿ, ಕೇಸರಿ ಧ್ವಜ ಹಾರಿಸಲಾಗಿದೆ ಎಂದು ಆರೋಪಿಸಿ ಸುದ್ದಿ ಪ್ರಕಟಿಸಲಾಗಿತ್ತು. ಇದು ಹೊಸ ವಿವಾದ ಹುಟ್ಟುಹಾಕಿದೆ. ಆದರೆ ಕಾಲೇಜಿನ ಸಿಬ್ಬಂದಿ ಪ್ರಕಾರ, ‘ಪ್ರತಿದಿನ ರಾಷ್ಟ್ರಧ್ವಜಾಹೋರಣ ಮಾಡುವುದಿಲ್ಲ. ಇವತ್ತು ಧ್ವಜಸ್ತಂಭದಲ್ಲಿ ಯಾವುದೇ ಧ್ವಜ ಇರಲಿಲ್ಲ’ ಎಂದು ತಿಳಿಸಿದ್ದಾರೆ.
ಟಿವಿ ಮಾಧ್ಯಮಗಳ ವರದಿ ಗಮನಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಘಟನೆ ಖಂಡಿಸಿ ಹೇಳಿಕೆ ನೀಡಿದ್ದಾರೆ. ಇದು ವಿವಾದದ ನಡುವೆ ಮತ್ತೊಂದು ವಿವಾದ ಹುಟ್ಟುಹಾಕಿದೆ.
ಇದನ್ನೂ ಓದಿ | ಶಿವಮೊಗ್ಗದಲ್ಲಿ ಹಿಜಾಬ್, ಕೇಸರಿ ಶಾಲು ವಿವಾದ ತಾರಕಕ್ಕೆ, ಕಲ್ಲು ತೂರಾಟ, ಹಲವರ ಬಂಧನ
Shimoga District Profile | About Shivamogga Live | Shivamogga Live WhatsApp Number 7411700200