SHIVAMOGGA LIVE NEWS | 12 NOVEMBER 2023
SHIMOGA : ‘ಪತ್ನಿಗೆ ಹುಷಾರಿಲ್ಲ ಮಣಿಪಾಲದ ಆಸ್ಪತ್ರೆಗೆ ಕರೆದೊಯ್ಯಬೇಕುʼ ಎಂದು ತಿಳಿಸಿ ಇನ್ನೋವಾ ಕಾರು ಪಡೆದು ಹಿಂತಿರುಗಿಸದ ಕಿರಣ್ ಅಲಿಯಾಸ್ ಗುಂಡನ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ.
ಕಿರಣ್ ಕುಮಾರ್ ಮತ್ತು ಸಂತೋಷ್ ಎಂಬುವವರು ಭದ್ರಾವತಿಯ ಜಯಲಕ್ಷ್ಮಿ ಅವರ ಇನ್ನೋವಾ ಕಾರು ಪಡೆದಿದ್ದರು. ಜಯಲಕ್ಷ್ಮಿ ಅವರ ಪತಿಗೆ ಕಿರಣ್ ಕುಮಾರ್ ಪರಿಚಿತನಾಗಿದ್ದರಿಂದ ಕಾರು ಕೊಟ್ಟಿದ್ದರು. ಸೆ.27ರಂದು ಶಿವಮೊಗ್ಗದ ಖಾಸಗಿ ಬಸ್ ನಿಲ್ದಾಣದ ಬಳಿಯಿಂದ ಕಾರು ಪಡೆದು ಈತನಕ ಹಿಂತಿರುಗಿಸಿರಲಿಲ್ಲ ಎಂದು ಆರೋಪಿಸಲಾಗಿದೆ.
ಸಿಕ್ಕಿಬಿದ್ದ ಗುಂಡನ ಬಳಿ 8 ಕಾರು
ಕಿರಣ್ ಕುಮಾರ್ ಅಲಿಯಾಸ್ ಗುಂಡನ ವಿರುದ್ಧ ಇದೇ ರೀತಿ ಹಲವು ಆರೋಪಗಳಿವೆ. ಈಗಾಗಲೇ ದೊಡ್ಡಪೇಟೆ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆತ ಬಳಿ 10 ಲಕ್ಷ ರೂ. ಮೌಲ್ಯದ 8 ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ. 2 ಟೊಯೋಟಾ ಇನ್ನೋವಾ, 3 ಸ್ವಿಫ್ಟ್ ಡಿಸೈರ್ ಮತ್ತು 3 ಮಾರುತಿ ಸುಜುಕಿ ಎರ್ಟಿಗಾ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ – ಪರಿಚಿತ ಅಂತಾ ಇನ್ನೋವಾ ಕಾರು ಕೊಟ್ಟರು, ಆಮೇಲೆ ಕಾರು ಇಲ್ಲ, ವ್ಯಕ್ತಿನೂ ಇಲ್ಲ, GPS ಚೆಕ್ ಮಾಡಿದಾಗ ಶಾಕ್
ವಿಶೇಷ ತಂಡದಿಂದ ಕಾರ್ಯಾಚರಣೆ
ಆರೋಪಿ ಮತ್ತು ಕಾರುಗಳ ಪತ್ತೆಗೆ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್, ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಬಾಲರಾಜ್.ಬಿ ಮೇಲ್ವಿಚಾರಣೆಯಲ್ಲಿ ಇನ್ಸ್ಪೆಕ್ಟರ್ ಅಂಜನ್ ಕುಮಾರ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಪಿಎಸ್ಐ ಮಂಜಮ್ಮ , ಸಿಬ್ಬಂದಿ ಲಚ್ಚಾನಾಯ್ಕ, ಪಾಲಾಕ್ಷನಾಯ್ಕ, ರಮೇಶ್, ನಿತಿನ್ ಮತ್ತು ಚಂದ್ರನಾಯ್ಕ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ – ಸಿಗಂದೂರು ಸೇತುವೆ ಮೇಲಿಂದ ಬಿದ್ದು ಕಾರ್ಮಿಕ ಸಾವು