SHIVAMOGGA LIVE NEWS | 6 ಏಪ್ರಿಲ್ 2022
ಹೃದಯಾಘಾತ ಸಂಭವಿಸಿ ಕರ್ತವ್ಯ ನಿರತ ಉಪ ತಹಶೀಲ್ದಾರ್ ಒಬ್ಬರು ಅಸುನೀಗಿದ್ದಾರೆ. ಸೊರಬ ತಾಲೂಕು ಆನವಟ್ಟಿ ನಾಡಕಚೇರಿಯಲ್ಲಿ ಇಂದು ಮಧ್ಯಾಹ್ನ ಘಟನೆ ಸಂಭವಿಸಿದೆ.
ಉಪ ತಹಶೀಲ್ದಾರ್ ಚನ್ನಕೇಶವ (45) ಮೃತರು. ಇವತ್ತು ಮಧ್ಯಾಹ್ನ ಕರ್ತವ್ಯದಲ್ಲಿ ಇರುವಾಗ ಹೃದಯಾಘಾತ ಸಂಭವಿಸಿದೆ. ಕೂಡಲೆ ಅವರನ್ನು ಆನವಟ್ಟಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಚನ್ನಕೇಶವ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.
ಚನ್ನಕೇಶವ ಅವರು ಸಾಗರದ ಶ್ರೀಧರ ನಗರ ನಿವಾಸಿಯಾಗಿದ್ದಾರೆ. ಪತ್ನಿ, ಇಬ್ಬರು ಪುತ್ರರು ಇದ್ದಾರೆ. 1998ರಲ್ಲಿ ಗ್ರಾಮ ಲೆಕ್ಕಿಗರಾಗಿ ಕಂದಾಯ ಇಲಾಖೆಗೆ ಸೇರ್ಪಡೆಯಾಗಿದ್ದ ಅವರು, ವಿವಿಧ ಹಂತದ ಪದೋನ್ನತಿ ಹೊಂದಿ ಉಪ ತಹಶೀಲ್ದಾರ್ ಆಗಿದ್ದರು. ಸೊರಬ ಪಟ್ಟಣದ ತಾಲೂಕು ಕಚೇರಿಯಲ್ಲಿ ಶಿರಸ್ತೆದಾರರಾಗಿ ಸಹ ಕರ್ತವ್ಯ ಸಲ್ಲಿಸಿದ್ದರು.
ಸಂತಾಪ ಸೂಚಿಸಿದ ಶಾಸಕರು
ಉಪತಹಶೀಲ್ದಾರ್ ಚನ್ನಕೇಶವ ಅವರ ನಿಧನಕ್ಕೆ ಶಾಸಕ ಎಸ್. ಕುಮಾರ್ ಬಂಗಾರಪ್ಪ, ಸರ್ಕಾರಿ ನೌಕರರ ಸಂಘ, ಕಂದಾಯ ಇಲಾಖೆಯ ನೌಕರರ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಯವರು ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ |
ಈ ಮೇಲ್ – [email protected]
WhatsApp Number – 7411700200