ಶಿವಮೊಗ್ಗ: ಹಣ್ಣಿನ ತಳ್ಳುಗಾಡಿ (fruit vendor) ಇಡುವ ವಿಚಾರವಾಗಿ ನಡೆದ ಗಲಾಟೆಯಲ್ಲಿ ವ್ಯಕ್ತಿಯೊಬ್ಬರ ಮೇಲೆ ಮಹಿಳೆ ಹಾಗೂ ಅವರ ಇಬ್ಬರು ಮಕ್ಕಳು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಘಟನೆ ಶಿವಮೊಗ್ಗ ನಗರದ ತೀರ್ಥಹಳ್ಳಿ ರಸ್ತೆಯ ಪಂಪ್ ಹೌಸ್ ಬಳಿ ನಡೆದಿದೆ.
ಹಣ್ಣಿನ ವ್ಯಾಪಾರಿ ಅಲ್ತಾಫ್ (43) ಹಲ್ಲೆಗೊಳಗಾದವರು. ಕಳೆದ 20 ವರ್ಷಗಳಿಂದ ಪಂಪ್ ಹೌಸ್ ಬಳಿ ತಳ್ಳುಗಾಡಿಯಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದಾರೆ. ಈಚೆಗೆ ಅಲ್ತಾಫ್ ಅವರು ವ್ಯಾಪಾರ ಮಾಡುತ್ತಿದ್ದಾಗ ಅಲ್ಲಿಗೆ ಬಂದ ಮಹಿಳೆ ಮತ್ತು ಇಬ್ಬರು ಮಕ್ಕಳು ಇಲ್ಲಿ ಗಾಡಿ ಹಾಕಬೇಡ ಎಂದು ಎಷ್ಟು ಬಾರಿ ಹೇಳಬೇಕು ಎಂದು ಗಲಾಟೆ ಆರಂಭಿಸಿದ್ದಾರೆ. ಈ ಸಂದರ್ಭ ಮಹಿಳೆ ಅವಾಚ್ಯವಾಗಿ ನಿಂದಿಸಿದ್ದು, ಅವರ ಮಕ್ಕಳು ಹಲ್ಲೆ ನಡೆಸಿದ್ದಾರೆ. ಅಲ್ಲದೆ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಗಾಯಗೊಂಡಿದ್ದ ಅಲ್ತಾಫ್, ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದರು. ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದರು. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಕಾರು ಡಿಕ್ಕಿಯಾಗಿ ಮತ್ತೊಂದು ಕಾರಿನ ಚಾಲಕ ಸಾವು, ಹೇಗಾಯ್ತು ಘಟನೆ?








