ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಮೈದಾನದಲ್ಲಿ ವಾಹನಗಳ ಪಾರ್ಕಿಂಗ್ ನಿರ್ಬಂಧಿಸಲಾಗಿದೆ (Parking Ban). ಇದು ಹಿಂದೂಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಮೈದಾನಕ್ಕೆ ದೌಡಾಯಿಸಿದ ಹಿಂದೂ ಕಾರ್ಯಕರ್ತರು, ಪಾರ್ಕಿಂಗ್ಗೆ ಅವಕಾಶ ಕಲ್ಪಿಸುವಂತೆ ಆಗ್ರಹಿಸಿದರು.
ಪಾರ್ಕಿಂಗ್ಗೆ ನಿರ್ಬಂಧವೇಕೆ? ಸಮಸ್ಯೆಗಳೇನು?
ರಂಜಾನ್ ಹಬ್ಬದ ಹಿನ್ನೆಲೆ ಮೈದಾನದಲ್ಲಿ ಸ್ವಚ್ಚತೆ ಮತ್ತು ಸಾಮೂಹಿಕ ಪ್ರಾರ್ಥನೆಯ ಸಿದ್ಧತೆಗಾಗಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಮೈದಾನದಲ್ಲಿ ವಾಹನಗಳ ಪಾರ್ಕಿಂಗ್ ನಿರ್ಬಂಧಿಸಲಾಗಿದೆ. ಮೈದಾನದ ಪ್ರವೇಶ ದ್ವಾರದಲ್ಲಿ ಬ್ಯಾರಿಕೇಡ್ಗಳನ್ನು ಅಳವಡಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ – ಬೆಳಗ್ಗೆ ಲೇಔಟ್ಗೆ ಬಂದ ಲೆಕ್ಚರರ್ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್
ಮೈದಾನದಲ್ಲಿ ಪಾರ್ಕಿಂಗ್ ಇಲ್ಲದೆ ವಾಹನಗಳನ್ನು ರಸ್ತೆ ಬದಿ ನಿಲ್ಲಿಸಲಾಗುತ್ತಿದೆ. ಇದರಿಂದ ವಾಹನಗಳ ಸುಗಮ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಇನ್ನು, ಮೈದಾನಕ್ಕೆ ಹೊಂದಿಕೊಂಡಂತೆ ಇರುವ ಅಂಗಡಿಗಳು, ಹೊಟೇಲ್ಗಳು, ಕಚೇರಿಗಳಿಗೆ ತೆರಳಲು ಜನರಿಗೆ ಸಾದ್ಯವಾಗುತ್ತಿಲ್ಲ. ಇದರಿಂದ ವ್ಯಾಪಾರಿಗಳಿಗೆ ಸಮಸ್ಯೆ ಆಗುತ್ತಿದೆ ಎಂಬ ಆರೋಪವಿದೆ.

ವಾರದ ಮೊದಲೆ ಬಂದ್ ಏಕೆ?
ಫೆ.21ರಂದು ರಂಜಾನ್ ಹಬ್ಬವಿದೆ. ಅಂದು ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ನೆರವೇರುತ್ತದೆ. ಆದರೆ ನಾಲ್ಕೈದು ದಿನ ಮೊದಲೇ ಮೈದಾನಕ್ಕೆ ವಾಹನಗಳ ಪ್ರವೇಶ ನಿರ್ಬಂಧಿಸಲಾಗಿದೆ. ಇದು ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಬಜರಂಗದಳ, ವಿಶ್ವ ಹಿಂದೂ ಪರಿಷದ್ ಮುಖಂಡರು ಮೈದಾನಕ್ಕೆ ಭೇಟಿ ನೀಡಿ, ಪೊಲೀಸರ ಜೊತೆಗೆ ಮಾತಿನ ಚಕಮಕಿ ನಡೆಸಿದರು.
ಹಿಂದೂ ಕಾರ್ಯಕರ್ತರ ಆಗ್ರಹವೇನು?
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಬಜರಂಗದಳ ವಿಭಾಗ ಸಂಚಾಲಕ ರಾಜೇಶ್ ಗೌಡ, ಮುಂಬರುವ ಹಬ್ಬದ ನಿಮಿತ್ತ ಮೈದಾನ ಸ್ವಚ್ಛಗೊಳಿಸುವ ನೆಪದಲ್ಲಿ ಒಂದು ವಾರ ಮುಂಚಿತವಾಗಿಯೇ ಬ್ಯಾರಿಕೇಡ್ ಹಾಕಿ ಸಾರ್ವಜನಿಕರ ವಾಹನಗಳ ಪ್ರವೇಶ ನಿರ್ಬಂಧಿಸಲಾಗಿದೆ. ಪಾಲಿಕೆಯ ಈ ಮೈದಾನದಲ್ಲಿ ನಮಾಜ್ ಮಾಡಲು ವರ್ಷಕ್ಕೆ ಎರಡು ದಿನ ಮಾತ್ರ ಅವಕಾಶವಿದೆ. ಈಗ ಹಲವು ದಿನಗಳ ಮುಂಚೆಯೇ ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಜಾಗದ ಮಾಲೀಕತ್ವದ ವಿಷಯವು ನ್ಯಾಯಾಲಯದಲ್ಲಿದೆ. ಅಂತಿಮ ತೀರ್ಪು ಬರುವವರೆಗೆ ಇಲ್ಲಿ ಯಥಾಸ್ಥಿತಿ ಕಾಪಾಡಬೇಕು. ಪೊಲೀಸ್ ಇಲಾಖೆ ತಕ್ಷಣವೇ ಬ್ಯಾರಿಕೇಡ್ಗಳನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಪಾರ್ಕಿಂಗ್ಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ರಕ್ಷಣಾಧಿಕಾರಿ ಹೇಳಿದ್ದೇನು?
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ರಕ್ಷಣಾಧಿಕಾರಿ ಬಿ.ನಿಖಿಲ್, ಮೈದಾನದಲ್ಲಿ ಸ್ವಚ್ಛತಾ ಕಾರ್ಯ ನಡೆಯುವಾಗ ಸಾರ್ವಜನಿಕರ ಪಾರ್ಕಿಂಗ್ಗೆ ತೊಂದರೆಯಾಗದಂತೆ ವ್ಯವಸ್ಥೆ ಕಲ್ಪಿಸಲು ಮಹಾನಗರ ಪಾಲಿಕೆ ಮತ್ತು ವಿವಿಧ ಮುಖಂಡರೊಂದಿಗೆ ಚರ್ಚಿಸಲಾಗಿದೆ. ಯುಗಾದಿ ಹಬ್ಬದ ಕಾರಣ ಕೆಲಸಗಾರರ ಕೊರತೆ ಇರಬಹುದು ಎಂಬ ಕಾರಣಕ್ಕೆ ಸ್ವಲ್ಪ ಮುಂಚಿತವಾಗಿ ಸ್ವಚ್ಛತಾ ಕಾರ್ಯ ಆರಂಭಿಸುವ ಅನಿವಾರ್ಯತೆ ಬಗ್ಗೆ ಪಾಲಿಕೆ ತಿಳಿಸಿದೆ ಎಂದರು.

ಸಾರ್ವಜನಿಕರಿಗೆ ತೊಂದರೆಯಾಗದಂತೆ ಇದನ್ನು ಹೇಗೆ ನಿರ್ವಹಿಸಬೇಕು ಎಂಬ ಬಗ್ಗೆ ಯೋಜನೆ ರೂಪಿಸಲಾಗುತ್ತಿದೆ. ಹಬ್ಬದ ಸಮಯದಲ್ಲಿ ಎಲ್ಲಾ ಸಮುದಾಯದ ಮುಖಂಡರು ಸಹಕಾರ ನೀಡುವುದಾಗಿ ಒಪ್ಪಿಕೊಂಡಿದ್ದಾರೆ. ಶಾಂತಿಯುತವಾಗಿ ಪರಿಸ್ಥಿತಿ ನಿಭಾಯಿಸಲು ಪೊಲೀಸ್ ಇಲಾಖೆ ಮತ್ತು ಪಾಲಿಕೆ ಜಂಟಿಯಾಗಿ ಕೆಲಸ ಮಾಡಲಿವೆ ಎಂದು ಎಸ್.ಪಿ. ನಿಖಿಲ್ ತಿಳಿಸಿದರು.

ಕಳೆದ ವರ್ಷವು ವಿವಾದವಾಗಿತ್ತು
ಜಿಲ್ಲಾಧಿಕಾರಿ ಕಚೇರಿ ಎದುರಿನ ಮೈದಾನದಲ್ಲಿ ಪಾರ್ಕಿಂಗ್ಗೆ ಅವಕಾಶ ನಿರ್ಬಂಧಿಸಿದ್ದರಿಂದ ಕಳೆದ ವರ್ಷವು ವಿವಾದವಾಗಿತ್ತು. ಶಾಶ್ವತವಾಗಿ ಬೇಲಿ ಹಾಕಲಾಗಿದೆ ಎಂದು ಹಿಂದು ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ, ಮೈದಾನದಲ್ಲಿಯೇ ಧರಣಿ ನಡೆಸಿದ್ದರು. ಬಳಿಕ ಮೈದಾನದ ಮಾಲೀಕತ್ವ ಕುರಿತು ವಿವಾದ ಶುರುವಾಗಿತ್ತು. ಸಾಲು ಸಾಲು ಪ್ರತಿಭಟನೆ, ಹೇಳಿಕೆ, ಪ್ರತಿ ಹೇಳಿಕೆಗಳು ಹೊರ ಬಿದ್ದಿದ್ದವು. ಕೊನೆಗೆ ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು.

LATEST NEWS
- ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ, ಶಿವಮೊಗ್ಗದಲ್ಲಿ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ?

- ಬ್ಯಾಂಕ್ ಉದ್ಯೋಗಿ, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, ಗಾಯಾಳುಗಳು ಆಸ್ಪತ್ರೆಗೆ

- ಶಿವಮೊಗ್ಗದಲ್ಲಿ ಕೆಲಸ ಖಾಲಿ ಇದೆ, ತಿಂಗಳಿಗೆ ₹20,000 ದಿಂದ ₹50,000 ದವರೆಗೆ ಸಂಬಳ

- ತಂದೆ, ಮಗನಿಗೆ ಜೀವಾವಧಿ ಶಿಕ್ಷೆ, ದಂಡ ವಿಧಿಸಿದ ಶಿವಮೊಗ್ಗ ಕೋರ್ಟ್, ಯಾಕೆ?

- ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? – 17 ಮಾರ್ಚ್ 2026 – ಅಡಿಕೆ ಧಾರಣೆ

About The Editor
ನಿತಿನ್ ಆರ್.ಕೈದೊಟ್ಲು















