ಶಿವಮೊಗ್ಗ: ಸ್ತ್ರೀರೋಗ ತಜ್ಞೆ (Doctor) ಡಾ. ಜಯಶ್ರೀ (55) ಮತ್ತು ಅವರ ಪುತ್ರ ಆಕಾಶ್ (34) ಆತ್ಮಹತ್ಯೆ ಪ್ರಕರಣ ಅಶ್ವಥನಗರ ಬಡಾವಣೆಯನ್ನು ತಲ್ಲಣಗೊಳಿಸಿದೆ. ನೆಂಟರು, ಇಷ್ಟರು ದಿಗ್ಭ್ರಮೆಗೀಡಾಗಿದ್ದಾರೆ. ಕೋಟ್ಯಂತರ ಮೌಲ್ಯದ ಆಸ್ತಿ ಇದ್ದರು ನೆಮ್ಮದಿ ಕಾಣದೆ ತಾಯಿ, ಮಗ ನೇಣಿಗೆ ಕೊರಳೊಡ್ಡಿದ್ದಾರೆ.
ಶಿವಮೊಗ್ಗ ಲೈವ್ನ ಪ್ರತಿ ಅಪ್ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್ಗಳನ್ನು ಜಾಯಿನ್ ಆಗಿ:
ಒಂದೇ ಹೊತ್ತಲ್ಲಿ ತಾಯಿ, ಮಗ ನೇಣಿಗೆ
ಡಾ. ಜಯಶ್ರೀ ಶಿವಮೊಗ್ಗದ ಖ್ಯಾತ ಸ್ತ್ರೀರೋಗ ತಜ್ಞೆ. ಪ್ರತಿಷ್ಠಿತ ಕುಟುಂಬ, ಕೋಟಿ ಕೋಟಿ ಆಸ್ತಿಯ ಒಡತಿಯಾದರು ಹಮ್ಮು, ಅಹಮ್ಮು ತೋರಿದವರಲ್ಲ. ಗಟ್ಟಿಗಿತ್ತಿಯಾಗಿದ್ದ ಡಾ. ಜಯಶ್ರೀ ತಮ್ಮ ಮನೆಯ ಕೊಠಡಿಯಲ್ಲಿ ನೈಲಾನ್ ಹಗ್ಗಕ್ಕೆ ನೇಣು ಬಿಗಿದುಕೊಂಡಿದ್ದಾರೆ. ಮತ್ತೊಂದು ಕೊಠಡಿಯಲ್ಲಿ ಡಾ. ಜಯಶ್ರೀ ಅವರ ಏಕೈಕ ಪುತ್ರ ಆಕಾಶ್ ಕೂಡ ಕುಣಿಕೆಗೆ ಕೊರಳೊಡಿದ್ದಾರೆ.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಅಶ್ವಥನಗರ 5ನೇ ಅಡ್ಡರಸ್ತೆಯ ‘ಸಾನಿಧ್ಯʼ ಮನೆಯಲ್ಲಿ ಡಾ. ಜಯಶ್ರೀ, ಪುತ್ರ ಆಕಾಶ್ ಮತ್ತು ಸೊಸೆ ಇದ್ದರು. ‘ಮನೆಯಲ್ಲಿ ಮೂವರು ಪ್ರತ್ಯೇಕವಾಗಿದ್ದರು. ಇವತ್ತು ಬೆಳಗ್ಗೆ ಸೊಸೆಗೆ ತಡವಾಗಿ ಎಚ್ಚರವಾಗಿದ್ದು ಪತಿಯ ಕೊಠಡಿಯ ಬಾಗಿಲು ಬಡಿದರು ತೆರೆದಿರಲಿಲ್ಲ. ಅನುಮಾನಗೊಂಡು ಸಂಬಂಧಿಕರಿಗೆ ವಿಷಯ ತಿಳಿಸಿದ್ದರು. ಅವರು ಬಂದು ಕೊಠಡಿಯ ಬಾಗಿಲು ಒಡೆದು ತೆಗೆದಾಗ ಆಕಾಶ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆʼ ಎಂದು ಹೆಚ್ಚುವರಿ ರಕ್ಷಣಾಧಿಕಾರಿ ಎ.ಜೆ.ಕಾರ್ಯಪ್ಪ ತಿಳಿಸಿದ್ದಾರೆ.
‘ಡಾ. ಜಯಶ್ರೀ ಅವರ ಕೊಠಡಿಯ ಬಾಗಿಲನ್ನು ತೆರೆದಾಗ ಅವರು ನೈಲಾನ್ ಹಗ್ಗಕ್ಕೆ ಕೊರಳೊಡ್ಡಿರುವುದು ಗೊತ್ತಾಗಿದೆ. ಕೂಡಲೆ ಪೊಲೀಸರಿಗೆ ಕರೆ ಮಾಡಲಾಗಿದೆʼ ಎಂದು ಎಎಸ್ಪಿ ಕಾರ್ಯಪ್ಪ ಸ್ಪಷ್ಟಪಡಿಸಿದರು.
ಸರಣಿ ಆತ್ಮಹತ್ಯೆಯ ‘ಸಾನಿಧ್ಯʼ
ಅಶ್ವಥನಗರದ ‘ಸಾನಿಧ್ಯ’ ಮನೆಯಲ್ಲಿ ಆತ್ಮಹತ್ಯೆಗಳ ಸರಣಿ ಮುಂದುವರೆದಿದೆ. ಡಾ. ಜಯಶ್ರೀ, ಆಕಾಶ್ ಆತ್ಮಹತ್ಯೆಯಿಂದ ಒಟ್ಟು ಐದು ಮಂದಿ ಸಾನ್ನಿಧ್ಯದಲ್ಲಿ ಅಸಹಜವಾಗಿ ಸಾವನ್ನಪ್ಪಿದಂತಾಗಿದೆ ಎಂದು ಸ್ಥಳೀಯರು ಆತಂಕದಿಂದ ಹೇಳುತ್ತಾರೆ.

ಡಾ. ಜಯಶ್ರೀ ಅವರದ್ದು ಪ್ರತಿಷ್ಠಿತ ಹೊಮ್ಮರಡಿ ಕುಟುಂಬ. ಮೂಲತಃ ದಾವಣಗೆರೆ ಜಿಲ್ಲೆಯ ನ್ಯಾಮತಿಯವರು. ಶಿವಮೊಗ್ಗದ ಅಶ್ವಥನಗರದಲ್ಲಿ ‘ಸಾನಿಧ್ಯʼ ಮನೆಯನ್ನು ಖರೀದಿಸಿದ್ದರು. ‘ಇದೇ ಮನೆಯಲ್ಲಿ ಡಾ. ಜಯಶ್ರೀ ಪತಿ ಡಾ. ನಾಗರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಮೂರು ವರ್ಷದ ಹಿಂದೆ ಇದೇ ಮನೆಯ ಕೆಳಭಾಗದಲ್ಲಿ ಡಾ. ಜಯಶ್ರೀ ಪುತ್ರ ಆಕಾಶ್ ಅವರ ಪತ್ನಿ ನವ್ಯಶ್ರೀ ಕೂಡ ನೇಣಿಗೆ ಕೊರಳೊಡ್ಡಿದ್ದರುʼ ಎಂದು ಇವರ ಸಂಬಂಧಿ ಮಂಜು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈಗ ಇದೇ ಮನೆಯ ಕೆಳಮಹಡಿಯಲ್ಲಿ ಡಾ. ಜಯಶ್ರೀ, ಮೇಲ್ಮಹಡಿಯ ಕೊಠಡಿಯಲ್ಲಿ ಆಕಾಶ್ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಇನ್ನು ‘ಈ ಮನೆ ಕಟ್ಟಿದವರು ಇದೇ ಮನೆಯಲ್ಲಿ ಅಸಹಜವಾಗಿ ಸಾವನ್ನಪ್ಪಿದ್ದರುʼ ಎಂದು ಮಾಜಿ ಕಾರ್ಪೊರೇಟರ್ ವಿಶ್ವಾಸ್ ಸ್ಮರಿಸಿಕೊಂಡಿದ್ದಾರೆ.
6 ತಿಂಗಳ ಹಿಂದಷ್ಟೆ ಮರು ಮದುವೆಯಾಗಿತ್ತು
ಡಾ. ಜಯಶ್ರೀ ಪುತ್ರ ಅಕಾಶ್ಗೆ 2022ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ನವ್ಯಶ್ರೀ ಎಂಬುವವರ ಜೊತೆಗೆ ವಿವಾಹವಾಗಿತ್ತು. ಐದೇ ತಿಂಗಳಿಗೆ, ಅಂದರೆ, 2022ರ ನವೆಂಬರ್ 6ರಂದು ನವ್ಯಶ್ರೀ ಇದೇ ಸಾನಿಧ್ಯ ಮನೆಯ ಶೆಡ್ನಲ್ಲಿ ನೇಣಿಗೆ ಶರಣಾಗಿದ್ದರು. ಈಚೆಗೆ ಚಿತ್ರದುರ್ಗ ಮೂಲದ ಯುವತಿ ಜೊತೆಗೆ ಆಕಾಶ್ ಎರಡನೆ ವಿವಾಹವಾಗಿದ್ದರು. ದುರದೃಷ್ಟವಶಾತ್ ಐದೇ ತಿಂಗಳಲ್ಲಿ ಆಕಾಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ʼಕೋಟಿ ಇದ್ದರು ನೆಮ್ಮದಿ ಇರಲಿಲ್ಲʼ
ಡಾ. ಜಯಶ್ರೀ ಅವರ ಕುಟುಂಬ ಕೋಟ್ಯಂತರ ರುಪಾಯಿ ಆಸ್ತಿ ಹೊಂದಿತ್ತು. ಉಷಾ ನರ್ಸಿಂಗ್ ಹೋಂ ಬಳಿ ಹೊಮ್ಮರಡಿ ಹೆಸರಿನ ನರ್ಸಿಂಗ್ ಹೋಂ ಇತ್ತು. ಶಿವಮೊಗ್ಗ, ನ್ಯಾಮತಿ ಸೇರಿದಂತೆ ವಿವಿಧೆಡೆ ನಿವೇಶನ, ತೋಟಗಳಿದ್ದವು. ಇಷ್ಟಿದ್ದರು ನೆಮ್ಮದಿ ಇರಲಿಲ್ಲ ಅನ್ನುವುದು ಅವರ ಪರಿಚಿತರ ಮಾತು.
ಇದನ್ನೂ ಓದಿ » ಶಿವಮೊಗ್ಗ ಸಿಟಿಯಲ್ಲಿ ಕಾಲೇಜು ಬಸ್ ಅಡ್ಡಗಟ್ಟಿದ ಅಪರಿಚಿತರು, ಮುಂದೇನಾಯ್ತು?
‘ಆಕಾಶ್ ಅವರ ಮೊದಲ ಪತ್ನಿ ನವ್ಯಶ್ರೀ ಆತ್ಮಹತ್ಯೆಯ ಬಳಿಕ ಡಾ. ಜಯಶ್ರೀ ಮತ್ತು ಆಕಾಶ್ ಖಿನ್ನತೆಗೆ ಒಳಗಾಗಿದ್ದರು. ಅಲ್ಲದೆ ತಾಯಿ, ಮಗನ ಮಧ್ಯೆ ಸಣ್ಣಪುಟ್ಟ ಜಗಳವಾಗುತ್ತಿತ್ತು ಎಂದು ಗೊತ್ತಾಗಿತ್ತುʼ, ಅನ್ನುತ್ತಾರೆ ಅವರ ಕುಟುಂಬಕ್ಕೆ ಆಪ್ತರಾದ ರೋಟರಿ ವಿಜಯ್ ಕುಮಾರ್. ‘ರಿಯಲ್ ಎಸ್ಟೇಟ್ ವ್ಯವಹಾರ ಸಂಬಂಧ ತಾಯಿ ಮತ್ತು ಮಗನ ಮಧ್ಯೆ ಮನಸ್ತಾಪವಾಗಿತ್ತು ಎಂದು ಹೇಳುತ್ತಿದ್ದಾರೆ ಎಂದು ಮಾಜಿ ಕಾರ್ಪೊರೇಟರ್ ವಿಶ್ವಾಸ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಡಾ. ಜಯಶ್ರೀ ಮತ್ತು ಆಕಾಶ್ ಆತ್ಮಹತ್ಯೆ ಪ್ರಕರಣ ಸದ್ಯ ಶಿವಮೊಗ್ಗದಲ್ಲಿ ಚರ್ಚೆಗೆ ಕಾರಣವಾಗಿದೆ. ತನಿಖೆಯಿಂದಷ್ಟೆ ಇವರ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ. ವಿನೋಬನಗರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
LATEST NEWS
- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

- ಬಿಆರ್ಪಿ ಲೆಜೆಂಡ್ಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸ್ನೇಹ ಸಮ್ಮಿಲನ

- ನೆಹರು ರಸ್ತೆಯ ಸಭಾಂಗಣದಲ್ಲಿ ಒಂದು ದಿನದ ಕಾರ್ಯಾಗಾರ, ಯಾರೆಲ್ಲ ಬರ್ತಾರೆ? ಏನೆಲ್ಲ ಚರ್ಚೆಯಾಗಲಿದೆ?

About The Editor
ನಿತಿನ್ ಆರ್.ಕೈದೊಟ್ಲು






