SHIVAMOGGA LIVE NEWS | 5 FEBRUARY 2024
HOLEHONNURU : ಮುಸ್ಲಿಂ ಖಬರಸ್ಥಾನ್ ಜಾಗದಲ್ಲಿದ್ದ ಅಕೇಶಿಯ ಮರ ಕಡಿದ ವಿಚಾರವಾಗಿ ಎರಡು ಕೋಮಿನ ಯುವಕರ ಮಧ್ಯೆ ಗಲಾಟೆಯಾಗಿದೆ. ಘಟನೆ ವೇಳೆ ಮಹಿಳೆ ಮೇಲೆ ಹಲ್ಲೆಯಾಗಿದೆ ಎಂದು ಮಹಿಳೆಯರು ಠಾಣೆ ಎದುರು ಧರಣಿ ನಡೆಸಿದರು.
ಕುರಿ ಗೂಟದಿಂದ ಜಗಳ
ಭದ್ರಾವತಿ ತಾಲೂಕು ಹೊಸ ಜಂಬರಘಟ್ಟೆಯ ಖಬರಸ್ಥಾನ್ (ಸ್ಮಶಾನ) ಜಾಗದಲ್ಲಿದ್ದ ಅಕೇಶಿಯ ಮರವನ್ನು ಕಡಿದು ರವಿ ಎಂಬಾತ ಕುರಿ ಗೂಟ ಸಿದ್ಧಪಡಿಸಿದ್ದ. ಇದನ್ನು ಗಮನಿಸಿದ ಅನ್ಯ ಕೋಮಿನ ಕೆಲವರು ತಕರಾರು ತೆಗೆದಿದ್ದರು. ವಿಷಯ ತಿಳಿದು ಗ್ರಾಮ ಸಮಿತಿಯವರು ಎರಡು ಕಡೆಯವರನ್ನು ಸಮಾಧಾನಿಸಿ ವಿವಾದ ತಣ್ಣಗಾಗಿಸಿದ್ದರು. ಆದರೆ ಮುಸ್ಲಿಂ ಸಮುದಾಯದ ಕೆಲವು ಯುವಕರು ರಾತ್ರಿ ರವಿ ಮನೆ ಬಳಿ ಬಂದಿದ್ದರು. ಈ ವೇಳೆ ಜನ ಜಮಾಯಿಸಿ ಪುನಃ ಗಲಾಟೆಯಾಗಿದೆ ಎಂದು ಆರೋಪಿಸಲಾಗಿದೆ.
ಠಾಣೆ ಎದುರು ಮಹಿಳೆಯರ ಧರಣಿ
ರಾತ್ರಿ ಗಲಾಟೆ ವೇಳೆ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆ ಮಹಿಳೆಯರು ಹೊಳೆಹೊನ್ನೂರು ಠಾಣೆ ಎದುರು ಧರಣಿ ನಡೆಸಿದರು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇನ್ನು, ಗಲಾಟೆ ವೇಳೆ ಗಾಯಗೊಂಡಿರುವ ಕೆಲವರು ಹೊಳೆಹೊನ್ನೂರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಗಲಾಟೆ ಸಂಬಂಧ ಹೊಳೆಹೊನ್ನೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ – ಸೇತುವೆ ಮೇಲಿಂದ ಹಳ್ಳಕ್ಕೆ ಉರುಳಿದ ಟಿಪ್ಪರ್, ಸಂಪೂರ್ಣ ಜಖಂ, ಸ್ವಲ್ಪದರಲ್ಲಿ ತಪ್ಪಿತು ಪ್ರಾಣಹಾನಿ