ಶಿವಮೊಗ್ಗ ಲೈವ್.ಕಾಂ | SHIMOGA NEWS | 26 MARCH 2021
ಐಸಿಐಸಿಐ ಬ್ಯಾಂಕ್ ಮ್ಯಾನೇಜರ್ ಸೋಗಿನಲ್ಲಿ ಕರೆ ಮಾಡಿದ ವ್ಯಕ್ತಿಯೊಬ್ಬ ಶಿಕಾರಿಪುರ ಮೂಲದ ಉದ್ಯಮಿಯೊಬ್ಬರನ್ನು ವಂಚಿಸಿದ್ದಾರೆ. ಇನ್ಷುರನ್ಸ್ ಹಣ ಬಾಕಿ ಇದ್ದು, ಅದನ್ನು ಪಾವತಿಸಿದರೆ ಹೆಚ್ಚು ಮೊತ್ತ ನಿಮ್ಮ ಖಾತೆಗೆ ಬರಲಿದೆ ಎಂದು ನಂಬಿಸಿ ಆ ವಂಚಕ ಒಂದು ಲಕ್ಷ ರೂ. ಪಂಗಾನಾಮ ಹಾಕಿದ್ದಾನೆ.
ಏನಿದು ಘಟನೆ? ಹೇಗಾಯ್ತು ವಂಚನೆ?
ಶಿಕಾರಿಪುರ ಮೂಲದ ಉದ್ಯಮಿಯೊಬ್ಬರಿಗೆ ಐಸಿಐಸಿಐ ಪ್ರೊಡೆನ್ಷಿಯಲ್ ಇನ್ಷುರೆನ್ಸ್ ಕಂಪನಿ ಹೆಸರಿನಲ್ಲಿ ಈ ಮೇಲ್ ಬಂದಿತ್ತು. ಇದರ ಬೆನ್ನಿಗೆ ಕರೆ ಮಾಡಿದ ವ್ಯಕ್ತಿಯೊಬ್ಬ, ತನ್ನನ್ನು ಐಸಿಐಸಿಐ ಬ್ಯಾಂಕ್ ಮ್ಯಾನೇಜರ್ ಎಂದು ನಂಬಿಸಿದ.
2012ರಲ್ಲಿ ನೀವು ಇನ್ಷುರೆನ್ಸ್ ಪಡೆದಿದ್ದು, 2013 ಮತ್ತು 2014ರಲ್ಲಿ ಹಣ ಪಾವತಿಸಿಲ್ಲ. ಇದನ್ನು ಪಾವತಿಸಿದರೆ 2021ರ ಮಾರ್ಚ್ 31ರಂದು ನಿಮ್ಮ ಖಾತೆಗೆ 2.70 ಲಕ್ಷ ರೂ. ಹಣ ಬರಲಿದೆ ಎಂದು ಆಸೆ ಹುಟ್ಟಿಸಿದ.
ಇದನ್ನು ನಂಬಿದ ಉದ್ಯಮಿ, ಆ ವಂಚಕ ನೀಡಿದ ಬ್ಯಾಂಕ್ ಖಾತೆಗೆ ಒಂದು ಲಕ್ಷ ರೂ. ಹಣ ವರ್ಗಾಯಿಸಿದರು.
ಇದನ್ನೂ ಓದಿ | ನಾನು ಬ್ಯಾಂಕ್ ಮ್ಯಾನೇಜರ್ ಮಾತಾಡ್ತಿರೋದು ಅಂತಾ ಹೇಳಿ, ಸಾಗರದ ವ್ಯಕ್ತಿಯ ಖಾತೆಯಿಂದ 1.65 ಲಕ್ಷ ನುಂಗಿದ
ಮರುದಿನ ಮತ್ತೆ ಕರೆ ಮಾಡಿದ ವಂಚಕ, ಮೂರು ಲಕ್ಷ ರೂ. ಹಣ ಕಟ್ಟಿದರೆ, 2022ರ ಏಪ್ರಿಲ್ 1ರಂದು ನಿಮ್ಮ ಖಾತೆಗೆ 8.75 ಲಕ್ಷ ರೂ. ಹಣ ಬರಲಿದೆ ಎಂದು ತಿಳಿಸಿದ. ಇದರಿಂದ ಅನುಮಾನಗೊಂಡ ಉದ್ಯಮಿಯು ಬ್ಯಾಂಕ್ಗೆ ತೆರಳಿ ವಿಚಾರಿಸಿದ್ದಾರೆ. ಆಗ ತಾವು ವಂಚನೆಗೊಳಗಾಗಿರುವುದು ಬೆಳೆಕಿಗೆ ಬಂದಿದೆ.
ಕೂಡಲೆ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಗೆ ಬಂದು ಪ್ರಕರಣ ದಾಖಲಿಸಿದ್ದಾರೆ.
ಮ್ಯಾನೇಜರ್ ಸೋಗಿನಲ್ಲಿ ಮಹಾ ವಂಚನೆ
ಬ್ಯಾಂಕ್ ಮ್ಯಾನೇಜರ್ ಸೋಗಿನಲ್ಲಿ ಜನರನ್ನು ವಂಚಿಸುವ ಪ್ರಕರಣಗಳು ಹೆಚ್ಚಾಗುತ್ತಿದೆ. ಬ್ಯಾಂಕ್ ಮ್ಯಾನೇಜರ್ ಅಥವಾ ಸಿಬ್ಬಂದಿ ಎಂದು ಕರೆ ಮಾಡಿದರೆ, ಜನರು ಹಣ ವಾರ್ಗಾವಣೆ ಮಾಡಬಾರದು. ಅಗತ್ಯವಿದ್ದರೆ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಸಿಬ್ಬಂದಿಗಳು ಅಥವಾ ಮ್ಯಾನೇಜರ್ ಜೊತೆ ಚರ್ಚೆ ನಡೆಸಿದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುವುದು ಒಳಿತು.
ಇದನ್ನೂ ಓದಿ | ಕ್ರೆಡಿಟ್ ಕಾರ್ಡ್ ಲಿಮಿಟ್ ಹೆಚ್ಚಳ ಮಾಡ್ತೀವಿ ಅಂತಾ ಭದ್ರಾವತಿಯ ಮಹಿಳೆಗೆ 1.10 ಲಕ್ಷ ರೂ. ವಂಚನೆ, ಹೇಗಾಯ್ತು?
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]