ಬೆಂಗಳೂರು: ರಾಜ್ಯದ ಯೋಜನಾ ಪ್ರಾಧಿಕಾರಿಗಳು ಮತ್ತು ಕಾಡಾ ಅಭಿವೃದ್ಧಿ ಪ್ರಾಧಿಕಾರಗಳ ಅಧ್ಯಕ್ಷರ ಅವಧಿಯನ್ನು ಮುಂದುವರೆಸಿ, ಆದೇಶ ಹೊರಡಿಸುವಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಗೆ ಬರೆದಿದ್ದಾರೆ ಎನ್ನಲಾದ ಪತ್ರ ವೈರಲ್ ಆಗಿದೆ.
ಡಿಸಿಎಂ ಬರೆದ ಪತ್ರದಲ್ಲಿ ಏನಿದೆ?
2024ರ ಫೆಬ್ರವರಿ 28ರಂದು ವಿವಿಧ ಪ್ರಾಧಿಕಾರಗಳ ಅಧ್ಯಕ್ಷರು ಹಾಗೂ ನಿಗಮ ಮಂಡಳಿಗಳಿಗೆ ಡಿಸಿಸಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಮುಖಂಡರುಗಳನ್ನು ಎರಡು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ನೇಮಕ ಮಾಡಲಾಗಿತ್ತು. ಫೆಬ್ರವರಿ 7ರಂದು ಹೊರಡಿಸಲಾದ ಆದೇಶದ ಪಟ್ಟಿಯಲ್ಲಿ ಕೆಲವು ಅಧ್ಯಕ್ಷರಿಗೆ ರಾಜ್ಯ ಸಚಿವ ಸ್ಥಾನಮಾನ ನೀಡಿ ಅವರ ಅವಧಿಯನ್ನು ಮುಂದುವರಿಸಲಾಗಿತ್ತು ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಈ ಪ್ರಕ್ರಿಯೆಯಲ್ಲಿ ವಿವಿಧ ಕಾಡಾ ಅಭಿವೃದ್ಧಿ ಪ್ರಾಧಿಕಾರ ಮತ್ತು ಕೆಲವು ಯೋಜನಾ ಪ್ರಾಧಿಕಾರಗಳ ಅಧ್ಯಕ್ಷರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಸದ್ಯ ಈ ಪ್ರಾಧಿಕಾರಗಳಿಗೆ ಬೇರೆ ಅಧ್ಯಕ್ಷರನ್ನು ನೇಮಕ ಮಾಡಿಲ್ಲ. ಆದ್ದರಿಂದ ಆಡಳಿತಾತ್ಮಕ ಕೆಲಸಗಳಿಗೆ ಅಡಚಣೆಯಾಗದಂತೆ ಈಗಿರುವ ಅಧ್ಯಕ್ಷರನ್ನೇ ಮುಂದಿನ ಆದೇಶದವರೆಗೆ ಅಥವಾ ಹೊಸಬರ ನೇಮಕ ಆಗುವವರೆಗೆ ಮುಂದುವರಿಸಲು ಆದೇಶ ಹೊರಡಿಸಬೇಕು ಎಂದು ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಗೆ ವಿನಂತಿಸಿದ್ದಾರೆ.
ಶಿವಮೊಗ್ಗದ ಇಬ್ಬರ ಹೆಸರು
ಈ ಶಿಫಾರಸು ಪಟ್ಟಿಯಲ್ಲಿ ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಮತ್ತು ಭದ್ರಾ ಕಾಡಾ ಅಧ್ಯಕ್ಷ ಡಾ. ಅಂಶುಮಂತ್ ಅವರ ಹೆಸರು ಸೇರಿವೆ. ಅಲ್ಲದೆ ಮೈಸೂರು, ಬಳ್ಳಾರಿ, ಮಂಗಳೂರು ಸೇರಿದಂತೆ ರಾಜ್ಯದ ಒಟ್ಟು 10 ಪ್ರಮುಖ ಪ್ರಾಧಿಕಾರಗಳ ಅಧ್ಯಕ್ಷರ ಹೆಸರನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಆಕಾಂಕ್ಷಿಗಳಿಗೆ ನಿರಾಸೆ ಮೂಡಿಸಿದ ಪತ್ರ ಇತ್ತ ಸೂಡಾ ಮತ್ತು ಭದ್ರಾ ಕಾಡಾ ಅಧ್ಯಕ್ಷ ಸ್ಥಾನದ ಮೇಲೆ ಹಲವರು ಕಣ್ಣಿಟ್ಟಿದ್ದಾರೆ. ಅಧ್ಯಕ್ಷ ಸ್ಥಾನ ಒಲಿಸಿಕೊಳ್ಳಲು ತೆರೆಮರೆ ಕಸರತ್ತು ಕೂಡ ನಡೆಸುತ್ತಿದ್ದರು. ಇನ್ನೊಂದೆಡೆ ಸ್ಥಾನ ಉಳಿಸಿಕೊಳ್ಳುವ ಪ್ರಯತ್ನವು ನಡೆದಿತ್ತು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪತ್ರದಿಂದಾಗಿ ಹಾಲಿ ಅಧ್ಯಕ್ಷರು ತುಸು ನಿರಾಳವಾಗಿದ್ದರೆ, ಆಕಾಂಕ್ಷಿಗಳಿಗೆ ನಿರಾಸೆ ಮೂಡಿಸಿದೆ. ಸದ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಕೈಗೊಳ್ಳುವ ನಿರ್ಧಾರದ ಮೇಲೆ ಕುತೂಹಲವಿದೆ.
ಇದನ್ನೂ ಓದಿ – ₹82,00,15,712 ವಂಚನೆ, ದೇಶಾದ್ಯಂತ 352 ಕೇಸ್, ಶಿವಮೊಗ್ಗದಲ್ಲಿ 3 ಅರೆಸ್ಟ್, ಕೋಟಿ ಕೋಟಿ ಮೋಸ ಹೇಗಾಯ್ತು?


About The Editor
ನಿತಿನ್ ಆರ್.ಕೈದೊಟ್ಲು





