ಭದ್ರಾವತಿ: ಕೆಎಸ್ಆರ್ಟಿಸಿ (KSRTC) ಬಸ್ ನಿಲ್ದಾಣದಲ್ಲಿ ಫೆಬ್ರವರಿ 12ರಂದು ಬಸ್ ಹತ್ತುವ ವೇಳೆ ಮಹಿಳೆಯೊಬ್ಬರ ಕೈಚೀಲದಲ್ಲಿದ್ದ 28 ಗ್ರಾಂ ತೂಕದ ಬಂಗಾರದ ಸರ (gold chain) ಕಳ್ಳತನವಾಗಿದೆ. ಶಿವಮೊಗ್ಗ ತಾಲೂಕಿನ ಮುದುವಾಲ ಗ್ರಾಮದ ಶಾಂತಮ್ಮ ಎಂಬುವವರು ತಮ್ಮ ₹3,00,000 ಮೌಲ್ಯದ ಸರ ಕಳುವಾಗಿದೆ ಎಂದು ದೂರು ನೀಡಿದ್ದಾರೆ.
ಶಾಂತಮ್ಮ ಅವರು ಅಂತರಘಟ್ಟಮ್ಮ ದೇವಸ್ಥಾನದ ಹಬ್ಬದ ಪ್ರಯುಕ್ತ ಭದ್ರಾವತಿಯ ಭದ್ರಾ ಕಾಲೋನಿಯಲ್ಲಿರುವ ತಮ್ಮ ತಂಗಿಯ ಮಗನ ಮನೆಗೆ ಬಂದಿದ್ದರು. ಹಬ್ಬ ಮುಗಿಸಿ ಭದ್ರಾವತಿಯಿಂದ ಶಿವಮೊಗ್ಗಕ್ಕೆ ಹೋಗುವ ಸರ್ಕಾರಿ ಬಸ್ ಹತ್ತಿದ್ದರು. ಬಸ್ಸು ಹೊರಟು ಜಯಶ್ರೀ ಸರ್ಕಲ್ ಬಳಿ ತಲುಪಿದಾಗ, ಟಿಕೆಟ್ ಪಡೆಯಲು ಆಧಾರ ಕಾರ್ಡ್ ತೆಗೆಯಲೆಂದು ತಮ್ಮ ಕೈಚೀಲದಲ್ಲಿದ್ದ ಪರ್ಸ್ ಅನ್ನು ಪರಿಶೀಲಿಸಿದ್ದಾರೆ.

ಈ ವೇಳೆ ಪರ್ಸ್ನಲ್ಲಿ ಇಟ್ಟಿದ್ದ 28 ಗ್ರಾಂ ತೂಕದ ಬಂಗಾರದ ಸರ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಬಸ್ ಹತ್ತುವ ಸಮಯ ಜನಸಂದಣಿ ಹೆಚ್ಚಿತ್ತು. ಈ ವೇಳೆ ಸರವನ್ನು ಕಳ್ಳತನ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಭದ್ರಾವತಿ ನ್ಯೂ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – 28 ವರ್ಷದ ಯುವಕನಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ, ₹1.30 ಲಕ್ಷ ದಂಡ, ಕಾರಣವೇನು?







