ಶಿವಮೊಗ್ಗ: ನಗರ ಪ್ರದೇಶದಲ್ಲಿ ಕಲುಷಿತ ಕುಡಿಯು ನೀರು ಸರಬರಾಜಾಗುತ್ತಿರುವುದನ್ನು (contaminated water) ಖಂಡಿಸಿ ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಸಕಲುಷಿತ ನೀರು ಬಳಕೆ ನಾಗರಿಕರ ಆರೋಗ್ಯ ಮೇಲೆ ದುಷ್ಪರಿಣಾಮ ಬೀರಲಿದೆ. ಇಂತಹ ನೀರು ತುಂಬಿಕೊಳ್ಳುವುದರಿಂದ ತೊಟ್ಟಿ ಹಾಗೂ ಟ್ಯಾಂಕ್ಗಳನ್ನು ಸ್ವಚ್ಛಗೊಳಿಸಲು ಸಾವಿರಾರು ರುಪಾಯಿ ಖರ್ಚು ಮಾಡಬೇಕಿದೆ. ಇದು ತೆರಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ ಎಂದು ಒಕ್ಕೂಟದ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ಕಲುಷಿತ ನೀರು ಸರಬರಾಜು ಆಗುತ್ತಿರುವ ಬಗ್ಗೆ ಮಂಡಳಿ ಬಳಿ ಕೇಳಿದರೆ ಮಳೆ ಬಂದಿದ್ದರಿಂದ ನೀರಿನ ಬಣ್ಣ ಬದಲಾಗಿದೆ ಎಂಬ ಸಿದ್ದ ಉತ್ತರ ನೀಡುತ್ತಿದ್ದಾರೆ. ಆದರೆ, ನೀರು ಶುದ್ದೀಕರಣ ಘಟಕದಲ್ಲಿ ಮಳೆಗಾಲಕ್ಕೆ ಮೊದಲೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಆರೋಪಿಸಿದರು.
ಇದನ್ನೂ ಓದಿ : ಶಿವಮೊಗ್ಗ ಸಿಟಿಯಲ್ಲಿ ಜಪಾನ್ ಮಾದರಿ ಫುಟ್ ಓವರ್ ಬ್ರಿಡ್ಜ್, ಎಲ್ಲೆಲ್ಲಿ ಸ್ಥಾಪಿಸುವ ಯೋಚನೆ ಇದೆ?
ನೀರು ಶುದ್ದೀಕರಣ ಕೇಂದ್ರದ ಘಟಕಗಳಲ್ಲಿ ಸಂಗ್ರಹವಾಗಿರುವ ಸಿಲ್ಟ್(ಮಣ್ಣು) ಅನ್ನು ಮಳೆಗಾಲಕ್ಕೂ ಮೊದಲೆ ತೆಗೆಯಬೇಕು. ಘಟಕದಲ್ಲಿನ ಉಪಕರಣಗಳು ಶಿಥಿಲವಾಗಿದ್ದು, ಕೆಲಸ ಮಾಡುತ್ತಿಲ್ಲ. ನೀರಿನಲ್ಲಿನ ಮಣ್ಣಿನ ಅಂಶವನ್ನು ತೆಗೆಯಲು ಆಲಂ ರಾಸಾಯನಿಕವನ್ನು ಸೂಕ್ತ ಪ್ರಮಾಣದಲ್ಲಿ ಬೆರೆಸುವ ಪ್ರಕ್ರಿಯೆ ನಡೆಸಬೇಕು. ಕುಡಿಯುವ ನೀರನ್ನು ವೈಜ್ಞಾನಿಕವಾಗಿ ಪರೀಕ್ಷೆಗೆ ಒಳಪಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕೆ.ವಿ.ವಸಂತ್ ಕುಮಾರ್, ಸತೀಶ್ ಕುಮಾರ್ ಶೆಟ್ಟಿ, ಚನ್ನವೀರಪ್ಪ ಗಾಮನಗಟ್ಟಿ, ಎಸ್.ಬಿ.ಅಶೋಕ್ ಕುಮಾರ್, ಡಾ.ಶೇಖರ್ ಗೌಳೇರ್ ಸೇರಿದಂತೆ ಮತ್ತಿತರರಿದ್ದರು.

About The Editor
ನಿತಿನ್ ಆರ್.ಕೈದೊಟ್ಲು






