ಶಿವಮೊಗ್ಗ: ಮಗುವಿಗೆ ಉಚಿತ ಆಯುರ್ವೇದ ಚಿಕಿತ್ಸೆ (Ayurvedic treatment) ನೀಡುವುದಾಗಿ ನಂಬಿಸಿ ಮಹಿಳೆಯೊಬ್ಬರ ಬಳಿ ಹಣ ಪಡೆದು ವಂಚಿಸಿರುವ ಘಟನೆ ಶಿವಮೊಗ್ಗ ತಾಲೂಕು ಮತ್ತೂರು ಗ್ರಾಮದಲ್ಲಿ ನಡೆದಿದೆ.
ಮತ್ತೂರು ಗ್ರಾಮದ ನಿವಾಸಿಯೊಬ್ಬರ ಮನೆಗೆ ಬಂದ ಅಪರಿಚಿತ ವ್ಯಕ್ತಿಯೊಬ್ಬ, ತಾನು ಕೇರಳದ ಆಯುರ್ವೇದ ಸಂಸ್ಥೆಯಿಂದ ಬಂದಿರುವುದಾಗಿ ಪರಿಚಯಿಸಿಕೊಂಡಿದ್ದ. ಮನೆಯಲ್ಲಿದ್ದ ವಿಕಲಚೇತನ ಮಗುವಿಗೆ ತಮ್ಮ ಸಂಸ್ಥೆಯಿಂದ ಉಚಿತವಾಗಿ ಆಯುರ್ವೇದ ಚಿಕಿತ್ಸೆ ನೀಡುವುದಾಗಿ ನಂಬಿಸಿದ್ದಾನೆ. ಅಲ್ಲಿಯೇ ಒಂದು ಔಷಧಿಯನ್ನು ನೀಡಿದ ಆತ, ಉಳಿದ ಔಷಧಿಯನ್ನು ಶಿವಮೊಗ್ಗದ ಮೆಡಿಕಲ್ ಶಾಪ್ನಿಂದ ತರಿಸಿಕೊಡುವುದಾಗಿ ಹೇಳಿದ್ದಾನೆ.
ಇದಕ್ಕೆ ₹25,000 ರೂಪಾಯಿ ಖರ್ಚಾಗುತ್ತದೆ ಎಂದು ತಿಳಿಸಿ, ಮಗುವಿನ ತಾಯಿಯ ಬಳಿ ಇದ್ದ ₹24,600 ರೂಪಾಯಿ ಪಡೆದುಕೊಂಡಿದ್ದಾನೆ. ಬಳಿಕ ಅಂಗನವಾಡಿಯಿಂದ ಲೆಟರ್ ತರುವುದಾಗಿ ಹೇಳಿ ಹೋದವನು ಹಿಂತಿರುಗಲಿಲ್ಲ. ಔಷಧಿಯನ್ನೂ ನೀಡದೆ, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ. ಅಖಿಲೇಶ್ ಹಿರೇಮಠ ಎಂಬಾತನ ವಿರುದ್ಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಚಂದ್ರಗುತ್ತಿ ರೇಣುಕಾಂಬಾ ದೇಗುಲದಲ್ಲಿ ಕಾಣಿಕೆ ಎಣಿಕೆ, ಹುಂಡಿಯಲ್ಲಿ ಎಷ್ಟಿತ್ತು?






