ಸಾಗರ: ಹುಲಿ ಗಣತಿಗಾಗಿ ಅರಣ್ಯದ ವಿವಿಧೆಡ ಅರಣ್ಯ ಇಲಾಖೆ ಇರಿಸಿರುವ ಕ್ಯಾಮರಾಗಳು (cameras) ಕಳ್ಳತನವಾಗುತ್ತಿವೆ. ಈ ಮಧ್ಯೆ ಸಾಗರ ತಾಲೂಕಿನ ಅರಣ್ಯದೊಳಗೆ ಗನ್ ಹಿಡಿದು ಓಡಾಡಿದ್ದ ವ್ಯಕ್ತಿಯೊಬ್ಬ ಕ್ಯಾಮರಾ ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಇನ್ನು, ಕ್ಯಾಮರಾ ಕಳವು ಕುರಿತು ಅರಣ್ಯ ಇಲಾಖೆ ಎರಡು ಪ್ರತ್ಯೇಕ ದೂರು ನೀಡಿದೆ.
ಕೇಸ್ 1 : 4 ಕ್ಯಾಮರಾಗಳು ಕಳವು
ಕಾರ್ಗಲ್ ಅರಣ್ಯ ವಲಯದ ಬ್ರಾಹ್ಮಣ ಕೊಪ್ಪರಿಗೆ ಹಾಗೂ ತಲಕಳಲೆ ಅರಣ್ಯ ಪ್ರದೇಶದಲ್ಲಿ ಅಳವಡಿಸಲಾಗಿದ್ದ ನಾಲ್ಕು ದುಬಾರಿ ಕ್ಯಾಮೆರಾಗಳು ಕಳ್ಳತನವಾಗಿವೆ. ಹುಲಿ ಗಣತಿ ಕಾರ್ಯಕ್ಕಾಗಿ ಅರಣ್ಯ ಇಲಾಖೆಯು ಈ ಪ್ರದೇಶಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಿತ್ತು. ಈ ಸಂಬಂಧ ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಏಪ್ರಿಲ್ 1ರಂದು ಈ ಕ್ಯಾಮೆರಾಗಳನ್ನು ಅರಣ್ಯದ ಆಯಕಟ್ಟಿನ ಸ್ಥಳಗಳಲ್ಲಿ ಅಳವಡಿಸಲಾಗಿತ್ತು. ಏಪ್ರಿಲ್ 7ರಂದು ಉಪವಲಯ ಅರಣ್ಯಾಧಿಕಾರಿ ಮೈಲಾರಪ್ಪ ಬಿ. ಕಾಶಂಬಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದಾಗ ಕಳ್ಳತನವಾಗಿರುವುದು ತಿಳಿದುಬಂದಿದೆ. ಕಳುವಾದ 4 ಕ್ಯಾಮೆರಾಗಳ ಒಟ್ಟು ಮೌಲ್ಯ ಸುಮಾರು 1.60 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.
ಕೇಸ್ 2 : ಗನ್ ಹಿಡಿದು ಓಡಾಡಿದ್ದ ವ್ಯಕ್ತಿ
ಕಣಪಗಾರು ಗಸ್ತಿನ ಕಲ್ಲುರಾಶಿ ಎಂಬಲ್ಲಿ ಹುಲಿ ಗಣತಿಗಾಗಿ ಅಳವಡಿಸಿದ್ದ ಕ್ಯಾಮೆರಾವನ್ನು ಕಳ್ಳತನ ಮಾಡಲಾಗಿದೆ. ಏಪ್ರಿಲ್ 7ರಂದು ಅರಣ್ಯ ಸಿಬ್ಬಂದಿ ಪರಿಶೀಲನೆಗೆ ಹೋದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಸುಮಾರು 40 ಸಾವಿರ ರೂಪಾಯಿ ಮೌಲ್ಯದ ಈ ಕ್ಯಾಮೆರಾವನ್ನು ಕಳ್ಳತನ ಮಾಡುತ್ತಿದ್ದ ದೃಶ್ಯವು ಸಮೀಪದ ಮತ್ತೊಂದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಏಪ್ರಿಲ್ 3ರಂದು ವ್ಯಕ್ತಿಯೊಬ್ಬ ಗನ್ ಹಿಡಿದು ಓಡಾಡುತ್ತಿರುವುದು ಹಾಗೂ ಏಪ್ರಿಲ್ 5ರಂದು ಕ್ಯಾಮೆರಾ ಕಳ್ಳತನ ಮಾಡುತ್ತಿರುವುದು ದಾಖಲಾಗಿದೆ.
ಇದನ್ನೂ ಓದಿ : ಹಂಸಿಣಿ ನೀರಾನೆಯ ಕೊನೆಕ್ಷಣದ CCTV ದೃಶ್ಯಾವಳಿ ರಿಲೀಸ್, ಮರಣೋತ್ತರ ಪರೀಕ್ಷೆಯ ವರದಿ ಬಹಿರಂಗ
ಕಾರ್ಗಲ್ ವನ್ಯಜೀವಿ ವಿಭಾಗದ ಆರ್ಎಫ್ಒ ನವೀನ್ ಕುಮಾರ್ ದೂರಿನ ಮೇರೆಗೆ ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

About The Editor
ನಿತಿನ್ ಆರ್.ಕೈದೊಟ್ಲು






